ಕೀರ್ತ. 11. ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನದು. ನಾನು ಯೆಹೋವನನ್ನು ಆಶ್ರಯಿಸಿಕೊಂಡಿದ್ದೇನೆ. ನೀವು, “ಪಕ್ಷಿಗಳಂತೆ ನಿಮ್ಮ ಬೆಟ್ಟಗಳಿಗೆ ಓಡಿಹೋಗಿರಿ” ಎಂದು ಹೇಳುವುದೇಕೆ? ದುಷ್ಟರು ಕತ್ತಲಲ್ಲಿ ಯಥಾರ್ಥ ಹೃದಯವುಳ್ಳವರನ್ನು ಕೊಲ್ಲಬೇಕೆಂದು ಬಿಲ್ಲುಬೊಗ್ಗಿಸಿ, ಹೆದೆಗೆ ಬಾಣವನ್ನು ಹೂಡಿದ್ದಾರೆ ನೋಡಿರಿ. ಆಧಾರಗಳೇ ಕೆಡವಲ್ಪಟ್ಟ ಮೇಲೆ ನೀತಿವಂತನ ಗತಿ ಏನಾದೀತು? ಯೆಹೋವನು ತನ್ನ ಪರಿಶುದ್ಧಮಂದಿರದಲ್ಲಿದ್ದಾನೆ; ಆತನು ತನ್ನ ಸಿಂಹಾಸನವನ್ನು ಪರಲೋಕದಲ್ಲಿ ಸ್ಥಾಪಿಸಿದ್ದಾನೆ. ಆತನ ಕಣ್ಣುಗಳು ಮಾನವರನ್ನು ನೋಡುತ್ತವೆ; ಆತನು ಅವರನ್ನು ಬಹು ಸೂಕ್ಷ್ಮವಾಗಿ ಪರಿಶೋಧಿಸುತ್ತಾನೆ. ಯೆಹೋವನು ನೀತಿವಂತರನ್ನು ಮತ್ತು ಅನೀತಿವಂತರನ್ನು ಪರೀಕ್ಷಿಸುತ್ತಾನೆ; ಬಲಾತ್ಕಾರವನ್ನು ಪ್ರೀತಿಸುವವರನ್ನು ಆತನು ದ್ವೇಷಿಸುತ್ತಾನೆ. ಆತನು ದುಷ್ಟರ ಮೇಲೆ ಬೆಂಕಿ ಗಂಧಕಗಳನ್ನು ಸುರಿಸಲಿ. ಉರಿಗಾಳಿಗಳನ್ನು ಅವರಿಗೆ ಪಾನವಾಗಮಾಡಲಿ. ಏಕೆಂದರೆ ನೀತಿಸ್ವರೂಪನಾದ ಯೆಹೋವನು ನೀತಿಯನ್ನು ಮೆಚ್ಚುವವನಾಗಿದ್ದಾನೆ. ಸಜ್ಜನರು ಆತನ ಸಾನ್ನಿಧ್ಯವನ್ನು ಸೇರುವರು.